ಕಲಾನಿಧಿ ನಾರಾಯಣನ್ ರವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಭರತನಾಟ್ಯ ಶಿಕ್ಷಕಿಯಾಗಿದ್ದರು. == ಆರಂಭಿಕ ಜೀವನ ಮತ್ತು ತರಬೇತಿ == ಕಲಾನಿಧಿ ನಾರಾಯಣನ್ ರವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು.ಅವರ ತಂದೆ ಎಸ್ ವಿ ಗಣಪತಿ ಮತ್ತು ತಾಯಿ ಸುಮಿತ್ರಾ.ತಾಯಿಗೆ ಕಲಾ ಪ್ರಕಾರದ ಮೇಲೆ ಇದ್ದ ಆಸಕ್ತಿಯೇ, ಮಗಳು ನೃತ್ಯ ಶಿಕ್ಷಣವನ್ನು ಪಡೆಯಲು ಕಾರಣವಾಯಿತು.ಇದಕ್ಕೆ ಅವರ ತಂದೆಯ ಸಂಪೂರ್ಣ ಬೆಂಬಲವಿತ್ತು.ಕಲಾನಿಧಿಯವರು ಏಳನೇ ವಯಸ್ಸಿನಿಂದ ಪ್ರಾರಂಭಿಸಿ, ಅನೇಕ ಗುರುಗಳ ಬಳಿ ತರಬೇತಿ ಪಡೆದುಕೊಂಡಿದ್ದಾರೆ.ಕಾಮಾಕ್ಷಿ ಅಮ್ಮಲ್ ಗುರುಗಳ ಬಳಿ ಪದ ಹಾಗೂ ಜಾವಳಿಗಳ ಕುರಿತು , ಮನಕ್ಕಲ್ ಶಿವರಾಜನ್ ಗುರುಗಳ ಬಳಿ ಗಾಯನ ಪಾಠಗಳ ಕುರಿತು ತರಬೇತಿ ಪಡೆದಿದ್ದಾರೆ. ಕಾಂಚೀಪುರಂ ನ ಖ್ಯಾತ ಗುರುಗಳಾದಂತಹ ಕಣ್ಣಪ್ಪ ಪಿಲ್ಲೈ ಯವರು ಕಲಾನಿಧಿಯವರ ಮುಖ್ಯ ನೃತ್ಯ ಶಿಕ್ಷಕರಾಗಿದ್ದರು.ಚಿನ್ನಯ್ಯ ನಾಯ್ಡು ಹಾಗೂ ಮೈಲಾಪುರ್ ಗೌರಿ ಅಮ್ಮಲ್ ರವರು ಕಲಾನಿಧಿಯವರಿಗೆ 'ಅಭಿನಯ'ದ ಕುರಿತು ತರಬೇತಿ ನೀಡಿದ್ದಾರೆ.ನಂತರದಲ್ಲಿ ಸ್ವತಃ ಅವರೇ ಅಭಿನಯಕ್ಕೆ ಹೊಸ ಆಯಾಮವನ್ನು ನೀಡಿದರು.ಮದ್ರಾಸ್ ಮ್ಯೂಸಿಕ್ ಅಕಾಡೆಮಿಗಾಗಿ ಚೆನ್ನೈನ ಸೆನೇಟ್ ಹೌಸ್ ನಲ್ಲಿ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ಕಲಾನಿಧಿಯವರು ರಂಗಪ್ರವೇಶ ಮಾಡಿದ್ದರು.ಹದಿಹರೆಯದ ವಯಸ್ಸಿನಲ್ಲಿರುವಾಗ ಅವರು ಎರಡು ಗಮನಾರ್ಹವಾದ ಧ್ವನಿಮುದ್ರಿಕೆಗಳನ್ನೂ ನೀಡಿದ್ದಾರೆ. == ವೃತ್ತಿ ಜೀವನ == ಕಲಾನಿಧಿಯವರ ವೃತ್ತಿ ಜೀವನದ ಹಾದಿ ಅಸಾಮಾನ್ಯವಾದುದು.ಅವರು ಏಳನೇ ವಯಸ್ಸಿನಿಂದ ಹದಿನಾರರ ವಯಸ್ಸಿನವರೆಗೆ ನೃತ್ಯ ತರಬೇತಿಯನ್ನು ಪಡೆದುಕೊಂಡಿದ್ದರು.ಆದರೆ ಅವರು ತಮ್ಮ ವಿವಾಹದ ಕಾರಣ ಹಾಗೂ ತಮ್ಮ ತಾಯಿಯ ನಿಧನದಿಂದಾಗಿ, ಮೂವತ್ತು ವರ್ಷಗಳ ಕಾಲ ಭರತನಾಟ್ಯ ಪ್ರಪಂಚದಿಂದ ದೂರವಿದ್ದರು.೧೯೭೩ ರಲ್ಲಿ ಅವರು ಮತ್ತೆ ತಮ್ಮ ನೃತ್ಯ ಕ್ಷೇತ್ರಕ್ಕೆ ಮರಳಿದರು.ಕಲಾನಿಧಿಯವರು ಸಣ್ಣ ವಯಸ್ಸಿನಲ್ಲಿರಬೇಕಾದರೆ, ಅವರ ನೃತ್ಯ ಪ್ರದರ್ಶನವನ್ನು ಕಂಡಂತಹ ಹೆಸರಾಂತ ಕಲಾ-ಪೋಷಕ ವೈ.ಜಿ. ದೊರೈಸ್ವಾಮಿಯವರ ಪ್ರೇರೇಪಣೆಯೇ, ಅವರನ್ನು ಮೂವತ್ತು ವರ್ಷಗಳ ಬಳಿಕ ಮತ್ತೊಮ್ಮೆ ನೃತ್ಯದ ಕಡೆಗೆ ಒಲವು ಮೂಡುವಂತೆ ಮಾಡಿತು.ನಗರದಲ್ಲಿ ನಡೆಯುತ್ತಿದ್ದ ನೃತ್ಯ ಪ್ರದರ್ಶನ, ಅರಂಗೇತ್ರಂ ಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಡಾ.ಪದ್ಮ ಸುಬ್ರಮಣ್ಯಂ ರವರ ಭರತನಾಟ್ಯ ನೃತ್ಯ ಸಿದ್ಧಾಂತದ ಕೋರ್ಸಿಗೂ ಸೇರಿಕೊಂಡರು.ಬರು ಬರುತ್ತಾ ಕಲಾನಿಧಿಯವರು 'ಅಭಿನಯ'ದ ಬಹು ಬೇಡಿಕೆಯ ಶಿಕ್ಷಕರಾದರು ಹಾಗೂ ಅನೇಕ ವಿದ್ಯಾರ್ಥಿಗಳು ಅವರ ಬಳಿ ತರಬೇತಿ ಪಡೆಯಲು ಪ್ರಾರಂಭ ಮಾಡಿದರು.ಅವರು ತಮ್ಮ ವಿದ್ಯಾರ್ಥಿಗಳ ಪ್ರೀತಿಪಾತ್ರರಾಗಿದ್ದರಿಂದ, ಅವರನ್ನು ಅವರ ವಿದ್ಯಾರ್ಥಿಗಳು 'ಮಾಮಿ' ಎಂದೇ ಕರೆಯುತ್ತಿದ್ದರು. == ಶಿಷ್ಯರು == ಕಲಾನಿಧಿಯವರ ಶಿಷ್ಯರಲ್ಲಿ, ಎ. ಲಕ್ಷ್ಮಣಸ್ವಾಮಿ (ಭಾರತ), ಬ್ರಗಾ ಬಸೆಲ್ (ಭಾರತ), ಶುಭಶ್ರೀ ನಾರಾಯಣನ್ (ಯುಎಸ್ಎ), ಮಿನಾಲ್ ಪ್ರಭು (ಭಾರತ), ಪ್ರಿಯಾ ಗೋವಿಂದ್ (ಭಾರತ), ಶರ್ಮಿಳಾ ಬಿಸ್ವಾಸ್, ಮೀನಾಕ್ಷಿ ಚಿತ್ರಂಜನ್ (ಅಭಿನಯ), ಮಿಲನ ಸೆವರ್ಸ್ಕಯ (ರಷ್ಯಾ) ಪ್ರಮುಖರಾಗಿದ್ದಾರೆ.ಅವರ ಶಿಷ್ಯರಲ್ಲಿ ಅನೇಕರು ಅವರ ತತ್ತ್ವಚಿಂತನೆಗಳನ್ನು ವೈಯಕ್ತೀಕರಿಸಿದ್ದಾರೆ. == ಪ್ರಶಸ್ತಿಗಳು == ೧೯೮೫ ರಲ್ಲಿ ಭಾರತದ ಮೂರನೇ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿ, ೧೯೯೦ ರಲ್ಲಿ ಭರತನಾಟ್ಯಕ್ಕಾಗಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೮ ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಲಾಯಿತು.ಹಾಗೆಯೇ ೨೦೧೧ ರಲ್ಲಿ ನೃತ್ಯಕ್ಕಾಗಿ, ಸಂಗೀತ ನಾಟಕ ಅಕಾಡೆಮಿ ಠಾಗೋರ್ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು. == ಉಲ್ಲೇಖಗಳು ==